ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡ ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತಿರುವ ಅಂಗವಿಕಲ, ವಿಶೇಷ ಮಕ್ಕಳ ಶಾಲೆಗಳಿಗೂ ಕ್ಷೀರಭಾಗ್ಯ ಹಾಗೂ ಬಿಸಿಯೂಟ ಯೋಜನೆಯನ್ನು ವಿಸ್ತ
ರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಸದ್ಯ ಸಾರ್ವಜನಿಕ ಶಿಕ್ಷಣ ಇಲಾ
ಖೆಯ ಅಡಿಯಲ್ಲಿ ನಡೆಸಲಾಗುತ್ತಿರುವ ಶಾಲೆಗಳ ಮಕ್ಕಳಿಗೆ ಮಾತ್ರ ಈ ಪ್ರಯೋಜನ ಸಿಗುತ್ತಿದೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶನಿವಾರ ಈ ನಿರ್ಧಾರ ತೆಗೆದುಕೊಂಡಿದ್ದು, ಇದರಿಂದ ಸುಮಾರು 10 ಸಾವಿರ ಅಂಗವಿಕಲ ಹಾಗೂ ವಿಶೇಷ ಮಕ್ಕಳು ಮುಂದಿನ ತಿಂಗಳಿನಿಂದಲೇ ನಿತ್ಯ ಹಾಲು ಹಾಗೂ ಊಟ ಪಡೆಯಲಿದ್ದಾರೆ. ಯೋಜನೆಯನ್ನು ವಿಸ್ತರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
ಎರಡು ದಿನಗಳ ಹಿಂದೆ ಅನುಮೋದನೆ ಪಡೆದ ಬಜೆಟ್ನಲ್ಲಿ ಈ ಅಂಶವೇನೂ ಸೇರ್ಪಡೆ ಆಗಿರಲಿಲ್ಲ. ಆದರೆ, ಶನಿವಾರ ನಡೆದ ಸಮಾರಂಭದಲ್ಲಿ ಅಂಗವಿಕಲರ ಸೇವಾ ಸಂಸ್ಥೆಗಳ ಒಕ್ಕೂಟ ಈ ಸಂಬಂಧ ಮನವಿ ಮಾಡಿದಾಗ, ಮುಖ್ಯಮಂತ್ರಿ ತಕ್ಷಣ ಸ್ಪಂದಿಸಿ ಸ್ಥಳದಿಂದಲೇ ಆದೇಶ ಹೊರಡಿಸಿದ್ದಾರೆ.
‘ಅಂಗವಿಕಲ ಮಕ್ಕಳಿಗೆ ಹಾಕಿಕೊಳ್ಳುವ ಯೋಜನೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನೀಡುವ ಅನುದಾನದ ವಿಷಯದಲ್ಲಿ ನಮ್ಮ ಅಧಿಕಾರಿಗಳು ಭ್ರಷ್ಟಚಾರ ನಡೆಸುವುದು ಗಮನಕ್ಕೆ ಬಂದರೆ, ತಕ್ಷಣ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಾರೆ.